Difference between revisions 330401 and 330402 on knwiki

=ನಾನು ಕಂಡ ಯಕ್ಷ ಪಯಣ=

          ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ. ಹಾಗಾಗಿ ನನ್ನ ಯಕ್ಷಗಾನ ನಂಟು ಬಲು ಸಹಜ. ನನ್ನ ಶಾಲಾ ಶಿಕ್ಷಣದ ಜೊತೆಗೇ ನನಗೆ ಯಕ್ಷಗಾನದ ಪರಿಚಯವಾಯಿತು. ಹಾಗಂತ ಶಾಲೆಯಲ್ಲಿ ಯಕ್ಷಗಾನ ಕಲೆಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರ್ಥವಲ್ಲ.ಬಹುಶಃ  ಆ ದಿನಗಳಲ್ಲಿ  (ನಾನು ಆಗ ಆರೇಳು ವರ್ಷದ ಮಗು) ಯಕ್ಷಗಾನವನ್ನು ಒಂದು ಕಲೆಯಾಗಿ ನೋಡುವಷ್ಟು ಪಕ್ವನಾಗಿದ್ದೆ. ನನ್ನ ಆರಂಭದ ನಂಟು ಕೇವಲ ಯಕ್ಷಗಾನದ ಒಂದು ಪ್ರಭೇದಕಷ್ಟೇ ಸೀಮಿತವಾಗಿತ್ತು.  ಅದು ತೆಂಕುತಿಟ್ಟಿನ 'ಬಯಲಾಟ' ಕಷ್ಟೇ.. ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳು ಯಕ್ಷಗಾನದ ಪ್ರಮುಖ ಎರಡು ಶೈಲಿಗಳು (ತಿಟ್ಟುಗಳೆಂದರೆ ಶೈಲಿಗಳು). ಈ ಶೈಲಿಯನ್ನು ಆ ಆ ತಿಟ್ಟುಗಳು ಅನುಸರಿಸುವ ಸಂಗೀತ, ವೇ‌ಷಭೂಷಣ, ನಾಟ್ಯ ಶೈಲಿಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಕಾಸರಗೋಡುನಿಂದ (ಆಗ  ಅದು ಕೇರಳ ರಾಜ್ಯದ ಭಾಗ) ಸುಮಾರು ಉಡುಪಿಯ ವರೆಗೆ ತೆಂಕು ತಿಟ್ಟಾದರೆ,   ಬ್ರಹ್ಮಾವರದಿಂದ ಕುಂದಾಪುರ, ತೀರ್ಥಹಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡಗು ತಿಟ್ಟಿನ  ಪ್ರಭಾವ.  ಹಾಗಾಗಿ, ಯಕ್ಷಗಾನದ  ಈ ಪ್ರಬೇಧವನ್ನು ಭೌಗೋಳಿಕವಾಗಿ ನೋಡಲು ಸಾಧ್ಯ ಕೂಡ. ನಾನು ಈ ಮೊದಲೇ ಹೇಳಿದಂತೆ, ನನ್ನ ಯಕ್ಷಗಾನದ ನಂಟು ಬಯಲಾಟಕಷ್ಟೇ ಸೀಮಿತವಾಗಿರಲು ಪ್ರಮುಖ ಕಾರಣ ನನಗಿದ್ದ ಸ್ವಾತಂತ್ರ್ಯ, ಕುತೂಹಲ, ಪ್ರೋತ್ಸಾಹ, ಶಾಲಾ ವಿದ್ಯಾಭ್ಯಾಸದ ಬಗ್ಗೆ ನನ್ನ ಸಹೋದರ ಬಂಧುಗಳು ಮತ್ತು ತಂದೆ ತಾಯಿಯರಿಗಿದ್ದ ಅತೀ ನಿರೀಕ್ಷೆಗಳು ಕಾರಣವಿರಬಹುದು. ಹಾಗಾಗಿ ಸುಮಾರು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುವರೆಗೆ ಯಕ್ಷಗಾನ ಕಲೆಯ ಇತರ ಪ್ರಬೇಧಗಳ ಪರಿಚಯ ನನಗಾಗಲಿಲ್ಲ. ಬಯಲಾಟದಲ್ಲೂ ನನ್ನ ತೆರೆದಿಡುವಿಕೆ ಎರಡು ಮೇಳಗಳಿಗ‍‍ಷ್ೞೇ (ಕಟೀಲು ಮತ್ತು ಮುಂಡ್ಕೂರು ಮೇಳಗಳು) ಸೀಮಿತವಾಗಿತ್ತು. ಏಕೆಂದರೆ, ಈ ಮೇಳಗಳ ಪ್ರದರ್ಶನಗಳು (ಯಕ್ಷಗಾನದ ಭಾ‍ಷೆಯಲ್ಲಿ ಇದು  'ಆಟ') ನನ್ನ ಊರಿನಲ್ಲಿ ಮತ್ತು ಸಮೀಪದ ಊರಿನಲ್ಲಿ ನಡೆಯುತ್ತಿದ್ದವು. ಏಕೆಂದರೆ ಈ ಪ್ರದರ್ಶನಗಳು ರಾತ್ರಿ ಪೂರ್ತಿ ನಡೆಯುವುದರಿಂದ ಬಹಳ ದೂರಕ್ಕೆ ಹೋಗಿ ಆಟ ನೋಡುವ ಅವಕಾಶ ನನಗಿರಲಿಲ್ಲ. ಇದಕ್ಕೆ ತಂದೆ ತಾಯಿಯ ಒಪ್ಪಿಗೆ ಸಿಗುತ್ತಿರಲಿಲ್ಲ. ಅದಕ್ಕೆ ಅವರ ಭಯ ಆತಂಕಗಳೂ ಕಾರಣವಿರಬಹುದು. ಈ ಹುಡುಗ ಆಟಕ್ಕೆ (ಯಕ್ಷಗಾನಕ್ಕೆ) ಹೋದರೆ ರಾತ್ರಿ ಯಾವುದಾದರೂ ತೊಂದರೆಗಳಿಗೆ ಒಳಗಾಗಬಹುದು ಎನ್ನುವ ಅವರ ಭಯ ಇದಕ್ಕೆ ಕಾರಣವಿರಬಹುದು. 

(contracted; show full)
ಕುಂಬ್ಳೆ ಸುಂದರ ರಾಯರು, ಸುಣ್ಣಂಬಳ ವಿಶ್ವೇ‌ಶ್ವರ ಭಟ್, ಜಬ್ಬರ್ ಸಮೋ, ಪೆರ್ಲ ಕೃ‍ಷ್ಣ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ಸಾಮಾಗ, ಕೆ. ಗೋವಿಂದ ಭಟ್ , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಮೊದಲಾದವರು ಈ ತಲೆಮಾರಿನ ಪ್ರಸಿದ್ಧ ಅರ್ಥಧಾರಿಗಳು.


ಯಕ್ಷಗಾನದಲ್ಲಿ ಪೂರಕ ಮಾರಕ ಬದಲಾವಣೆಗಳಾಗಿವೆ. ಪೌರಾಣಿಕ ಕಥಾವಸ್ತುವೇ ಪ್ರಧಾನವಾಗಿದ್ದ ಯಕ್ಷಗಾನಕ್ಕೆ , ಸಾಮಾಜಿಕ, ಕಾಲ್ಪನಿಕ ಕಥಾವಸ್ತ್ತುಗಳು ಪ್ರವೇಶಿಸುತ್ತವೆ. ಯಕ್ಷಗಾನವನ್ನು ಹಿಂದಿ, ತುಳು, ಇಂಗ್ಲೀ‍ಷ್ ಭಾ‍‍ಷೆಗಳಲ್ಲಿ ಪ್ರದರ್ಶಿಸಿದ ಉದಾಹರಣೆಗಳಿವೆ. ರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ನಡೆಯುವ ಯಕ್ಷಗಾನ ನಾಲ್ಕು ಗಂಟೆಯ ಸೀಮಿತ ಅವಧಿಯಲ್ಲಿ ಪ್ರದರ್ಶಿಸಿದ ಉದಾಹರಣೆಗಳಿವೆ, ಮೇಳವಿದೆ. ಭಾಮಿನಿ, ಯಕ್ಷಗಾನ ಅವಧಾನಗಳು ಯಕ್ಷಗಾನ ಬೆಳೆದ ಪರಿಯ ಸಂಕೇತ. ಈಗ ಯಕ್ಷಗಾನ ಕರಾವಳಿಗ‍‍ಷ್ಟೇ ಸೀಮಿತವಾಗಿಲ್ಲ. ಅದು ದೇಶದ ಉದ್ದಗಲಕ್ಕೂ ಸಂಚರಿಸಿ ಸಾಗರೋಲ್ಲಂಘನೆ ಮಾಡಿ ಅಲ್ಲಿ ಭೇಷ್ ಎನಿಸಿಕೊಂಡಿದೆ. 

ಕಲೆ ಬೆಳೆಸುವಲ್ಲಿ ತನ್ನ ಜೀವನದ ನೆಲೆಯನ್ನೇ ಕಳೆದುಕೊಂಡ ಹಲವಾರು ಕಲಾವಿದರು ಇದ್ದಾರೆ. ಅವರಿಗೆಲ್ಲ  ನಾವು ಅಭಾರಿಗಳು. ಇವತ್ತು ಈ ಕಲೆಯನ್ನು ನಮ್ಮ ಮನೆಯಲ್ಲೇ ನೋಡುವಷ್ಟು ನಮ್ಮ ತಂತ್ರಜ್ಜ಼ಾನ ಬೆಳೆದಿದೆ. ಆದರೆ, ನಿಜವಾದ ಯಕ್ಷಗಾನದ ರುಚಿ ಸವಿಯ ಬೇಕಾದರೆ, ರಾತ್ರಿ ಪೂರ್ತಿ ಎಚ್ಚರವಿದ್ದು ನೋಡಿದಾಗ ಮಾತ್ರ ಸಾಧ್ಯ. ಸಿರಿಗನ್ನಡಂ ಗೆಲ್ಗೆ,ಯಕ್ಷಗಾನಂ ಬಾಳ್ಗೆ.