Difference between revisions 330402 and 330447 on knwiki=ನಾನು ಕಂಡ ಯಕ್ಷ ಪಯಣ=
ನಾನು ಹುಟ್ಟಿ ಬೆಳೆದದ್ದು ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ. ಹಾಗಾಗಿ ನನ್ನ ಯಕ್ಷಗಾನ ನಂಟು ಬಲು ಸಹಜ. ನನ್ನ ಶಾಲಾ ಶಿಕ್ಷಣದ ಜೊತೆಗೇ ನನಗೆ ಯಕ್ಷಗಾನದ ಪರಿಚಯವಾಯಿತು. ಹಾಗಂತ ಶಾಲೆಯಲ್ಲಿ ಯಕ್ಷಗಾನ ಕಲೆಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದರ್ಥವಲ್ಲ.ಬಹುಶಃ ಆ ದಿನಗಳಲ್ಲಿ (ನಾನು ಆಗ ಆರೇಳು ವರ್ಷದ ಮಗು) ಯಕ್ಷಗಾನವನ್ನು ಒಂದು ಕಲೆಯಾಗಿ ನೋಡುವಷ್ಟು ಪಕ್ವನಾಗಿದ್ದೆ. ನನ್ನ ಆರಂಭದ ನಂಟು ಕೇವಲ ಯಕ್ಷಗಾನದ ಒಂದು ಪ್ರಭೇದಕಷ್ಟೇ ಸೀಮಿತವಾಗಿತ್ತು. ಅದು ತೆಂಕುತಿಟ್ಟಿನ 'ಬಯಲಾಟ' ಕಷ್ಟೇ.. ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳು ಯಕ್ಷಗಾನದ ಪ್ರಮುಖ ಎರಡು ಶೈಲಿಗಳು (ತಿಟ್ಟುಗಳೆಂದರೆ ಶೈಲಿಗಳು). ಈ ಶೈಲಿಯನ್ನು ಆ ಆ ತಿಟ್ಟುಗಳು ಅನುಸರಿಸುವ ಸಂಗೀತ, ವೇಷಭೂಷಣ, ನಾಟ್ಯ ಶೈಲಿಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಕಾಸರಗೋಡುನಿಂದ (ಆಗ ಅದು ಕೇರಳ ರಾಜ್ಯದ ಭಾಗ) ಸುಮಾರು ಉಡುಪಿಯ ವರೆಗೆ ತೆಂಕು ತಿಟ್ಟಾದರೆ, ಬ್ರಹ್ಮಾವರದಿಂದ ಕುಂದಾಪುರ, ತೀರ್ಥಹಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಡಗು ತಿಟ್ಟಿನ ಪ್ರಭಾವ. ಹಾಗಾಗಿ, ಯಕ್ಷಗಾನದ ಈ ಪ್ರಬೇಧವನ್ನು ಭೌಗೋಳಿಕವಾಗಿ ನೋಡಲು ಸಾಧ್ಯ ಕೂಡ. ನಾನು ಈ ಮೊದಲೇ ಹೇಳಿದಂತೆ, ನನ್ನ ಯಕ್ಷಗಾನದ ನಂಟು ಬಯಲಾಟಕಷ್ಟೇ ಸೀಮಿತವಾಗಿರಲು ಪ್ರಮುಖ ಕಾರಣ ನನಗಿದ್ದ ಸ್ವಾತಂತ್ರ್ಯ, ಕುತೂಹಲ, ಪ್ರೋತ್ಸಾಹ, ಶಾಲಾ ವಿದ್ಯಾಭ್ಯಾಸದ ಬಗ್ಗೆ ನನ್ನ ಸಹೋದರ ಬಂಧುಗಳು ಮತ್ತು ತಂದೆ ತಾಯಿಯರಿಗಿದ್ದ ಅತೀ ನಿರೀಕ್ಷೆಗಳು ಕಾರಣವಿರಬಹುದು. ಹಾಗಾಗಿ ಸುಮಾರು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಯುವರೆಗೆ ಯಕ್ಷಗಾನ ಕಲೆಯ ಇತರ ಪ್ರಬೇಧಗಳ ಪರಿಚಯ ನನಗಾಗಲಿಲ್ಲ. ಬಯಲಾಟದಲ್ಲೂ ನನ್ನ ತೆರೆದಿಡುವಿಕೆ ಎರಡು ಮೇಳಗಳಿಗಷ್ೞೇ (ಕಟೀಲು ಮತ್ತು ಮುಂಡ್ಕೂರು ಮೇಳಗಳು) ಸೀಮಿತವಾಗಿತ್ತು. ಏಕೆಂದರೆ, ಈ ಮೇಳಗಳ ಪ್ರದರ್ಶನಗಳು (ಯಕ್ಷಗಾನದ ಭಾಷೆಯಲ್ಲಿ ಇದು 'ಆಟ') ನನ್ನ ಊರಿನಲ್ಲಿ ಮತ್ತು ಸಮೀಪದ ಊರಿನಲ್ಲಿ ನಡೆಯುತ್ತಿದ್ದವು. ಏಕೆಂದರೆ ಈ ಪ್ರದರ್ಶನಗಳು ರಾತ್ರಿ ಪೂರ್ತಿ ನಡೆಯುವುದರಿಂದ ಬಹಳ ದೂರಕ್ಕೆ ಹೋಗಿ ಆಟ ನೋಡುವ ಅವಕಾಶ ನನಗಿರಲಿಲ್ಲ. ಇದಕ್ಕೆ ತಂದೆ ತಾಯಿಯ ಒಪ್ಪಿಗೆ ಸಿಗುತ್ತಿರಲಿಲ್ಲ. ಅದಕ್ಕೆ ಅವರ ಭಯ ಆತಂಕಗಳೂ ಕಾರಣವಿರಬಹುದು. ಈ ಹುಡುಗ ಆಟಕ್ಕೆ (ಯಕ್ಷಗಾನಕ್ಕೆ) ಹೋದರೆ ರಾತ್ರಿ ಯಾವುದಾದರೂ ತೊಂದರೆಗಳಿಗೆ ಒಳಗಾಗಬಹುದು ಎನ್ನುವ ಅವರ ಭಯ ಇದಕ್ಕೆ ಕಾರಣವಿರಬಹುದು.
ನನಗೆ ಯಕ್ಷಗಾನದ ಪ್ರಾಥಮಿಕ ಪರಿಚಯ ಮಾಡಿಸಿದವರು ನನ್ನ ತೀರ್ಥರೂಪರವರು. ಅವರ ವಿಶ್ರಾಂತಿ ಸಮಯದಲ್ಲಿ (ಅವರು ಕೃಷಿಕ) ಪ್ರಸಿದ್ಧ ಯಕ್ಷಗಾನ ಭಾಗವತರು, ಚೆಂಡೆವಾದಕರು, ಮದ್ದಳೆವಾದಕರು (ಯಕ್ಷಗಾನ ಮೃದಂಗ), ವೇಷಧಾರಿಗಳ ಹಿನ್ನೆಲೆ, ವ್ಯಕ್ತಿಪರಿಚಯ ಮತ್ತು ವಿಶಿಷ್ಟತೆಗಳನ್ನು ಹೇಳುತಿದ್ದರು. ಇದನ್ನು ಕೇಳುತ್ತಾ, ಆಟ ನೋಡುತ್ತಾ ನನ್ನ ಯಕ್ಷಗಾನದ ಅಭಿರುಚಿ ಹೆಚ್ಚುತ್ತಾ ಹೋಯಿತು. ಇದರ ಜೊತೆ ನಮ್ಮ ತಂದೆ ಯಕ್ಷಗಾನದ ಪೂರ್ವರಂಗದ ಹಾಡುಗಳನ್ನು ಗುನುಗುತ್ತಿದ್ದರು. ಬಹಳ ಮುಖ್ಯವಾಗಿ ಮಂಗಳೂರು ಆಕಾಶವಾಣಿಯಿಂದ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಯಕ್ಷಗಾನ ತಾಳಮದ್ದಳೆ (ಆಗ ನನಗೆ ಯಕ್ಷ್ಗಗಾನ ಮತ್ತು ತಾಳಮದ್ದಳೆಯ ವ್ಯತ್ಯಾಸ ತಿಳಿದಿರಲಿಲ್ಲ!) ನನ್ನ ಯಕ್ಷ್ಗಗಾನದ ಕುರಿತ ತಿಳಿವಳಿಕೆ ಮತ್ತು ಆಸಕ್ತಿಯನ್ನು ಮತ್ತಷ್ಟು ಕೆರಳಿಸಿತು. ನನಗೆ ಯಕ್ಷಗಾನದಲ್ಲಿ ಪ್ರಥಮ ಪರಿಚಯಗೊಂಡ ಕಲಾವಿದರು - ಕಿರಿಯ ಬಲಿಪ ನಾರಾಯಣ ಭಾಗವತರು, ಗೋಪಾಲಕೃಷ್ಣ ಭಟ್ (ಭಾಗವತರು), ಕೋಳ್ಯೂರು ರಾಮಚಂದ್ರರಾಯರು (ಸ್ತ್ರೀವೇಷ) ತಿವಿಕ್ರಮ ಶೆಣೈ, ಅರುವ ಕೊರಗಪ್ಪ ರೈ, ಕದ್ರಿ ಮನೋಹರ್ (ಖಳನಾಯಕ, ರಾಜವೇಷ) ಜಯರಾಮ ಶೆಟ್ಟಿ, ಪರಮೇಶ್ವರ, ಮುಖ್ಯಪ್ರಾಣ ಕಿನ್ನಿಗೋಳಿ, ಮಿಜಾರು ಅಣ್ಣಪ್ಪ, ಪುಳಿಂಚೆ ರಾಮಯ್ಯ ರೈ (ಹಾಸ್ಯಗಾರರು), ಶೇಣಿ ಗೋಪಾಲಕೃಷ್ಣ ಭಟ್ (ಆಗ ಶೇಣಿಗೂ , ಶ್ರೇಣಿಗೂ ವ್ಯತ್ಯಾಸ ತಿಳಿದಿರಲಿಲ್ಲ ಹಾಗಾಗಿ ನಾನು ಅವರನ್ನು ಶ್ರೇಣಿ ಎಂದೇ ಕರೆಯುತ್ತಿದ್ದೆ) , ಮಲ್ಪೆ ಶಂಕರನಾರಾಯಣ ಸಾಮಗ (ದೊಡ್ಡ ಸಾಮಗರು) ರಾಮದಾಸ್ ಸಾಮಗ (ಸಣ್ಣ ಸಾಮಗರು), ವಾಸುದೇವ ಸಾಮಗ, ಕುಂಬ್ಳೆ ಶ್ರೀಧರ ರಾವ್ (ಸ್ತ್ರೀವೇಷ),ಬಣ್ಣದ ಮಾಲಿಂಗ (ಮಹಾಲಿಂಗ). ಸಾಮಾನ್ಯವಾಗಿ ಎಲ್ಲ ಕಲಾವಿದರೂ ತಮ್ಮ ಊರು ಅಥವಾ ಅವರ ಮನೆತನದ ಹೆಸರಿನ ಉಪಾಧಿಯನ್ನು ಹೊಂದಿರುತ್ತಿದ್ದರು - ಕುಂಬ್ಳೆ, ಶೇಣಿ, ಸಂಪಾಜೆ, ಬಲಿಪ, ಸಾಮಗ, ಅರುವ, ಬೋಳಾರು, ಅಡ್ವೆ ,ಇತ್ಯಾದಿ. ಇವರೆಲ್ಲ ಈ ಉಪಾಧಿಗಳಿಂದಲೇ ಗುರುತಿಸಲ್ಪಟ್ಟವರು.
ನಾನು ಹೈಸ್ಕೂಲ್ ಓದುವಾಗ ಟಿಂಟ್ ಮೇಳಗಳು, ತಾಳಮದ್ದಳೆ ಪ್ರಕಾರದ ಪರಿಚಯವಾಯಿತು. ಬಯಲಾಟಗಳು ಉಚಿತವಾಗಿ, ಅದರ ವೀಕ್ಷಣೆ ಎಲ್ಲರಿಗೂ ಮುಕ್ತವಾಗಿರುತ್ತದೆ ಮತ್ತು ಅದು ಬಯಲಿನಲ್ಲಿ ನಡೆಯುವ ಪ್ರದರ್ಶನ. ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ ಚಳಿಗಾಲದಲ್ಲಿ ಪ್ರಾರಂಭವಾಗಿ ಬೇಸಿಗೆಯ ಕೊನೆಗೆ ಮುಕ್ತಾಯವಾಗುತ್ತದೆ. ಏಕೆಂದರೆ ಹಿಂದೆ ಮಳೆಗಾಲದಲ್ಲಿ ಪ್ರದರ್ಶನಕ್ಕೆ ಬೇಕಾದ ಸೌಲಭ್ಯಗಳಿರಲಿಲ್ಲ. ಆದರೆ ಈಗ ಮಳೆಗಾಲದಲ್ಲೂ ಪ್ರದರ್ಶನಗಳು ನಡೆಯುತ್ತವೆ. ಹಿಂದೆ ಮಳೆಗಾಲದಲ್ಲಿ ನಡೆಯುತ್ತಿದ್ದದು ತಾಳಮದ್ದಳೆಗಳು. ತಾಳಮದ್ದಳೆಯು ಸಾಹಿತ್ಯ ಪ್ರಧಾನವಾಗಿದ್ದು, ಇದರಲ್ಲಿ ನಾಟ್ಯ ಮತ್ತು ವೇಷಭೂಷಣಕ್ಕೆ ಅವಕಾಶವಿಲ್ಲ. ಇದು ಮಾತು ಪ್ರಧಾನವಾಗಿರುತ್ತದೆ. ಇದರಲ್ಲಿ ಪಾತ್ರಧಾರಿಗಳು ಅರ್ಥಧಾರಿಗಳಾಗಿ ಹೊರಹೊಮ್ಮುತ್ತಾರೆ. ತನ್ನ ಪಾಂಡಿತ್ಯ, ತರ್ಕಶಕ್ತಿ, ಕಥಾ ಪ್ರಭುತ್ವ, ಪಾತ್ರ ನಿರ್ವಹಣೆ ಮತ್ತು ಪ್ರ್ತತ್ತ್ಯುತ್ಪನ್ನಮತಿತ್ವ ಸಾಮರ್ಥ್ಯಗಳಿಂದ ರಾಮನಾಗಿ, ವಾಲಿಯಾಗಿ, ಮಂಡೋದರಿಯಾಗಿ, ಸುಧನ್ವನಾಗಿ, ಅರ್ಜುನನಾಗಿ, ರಾವಣನಾಗಿ, ಸೀತೆಯಾಗಿ, ಕಾಳಿದಾಸನಾಗಿ, ಶಂಕರನಾಗಿ, ಸತ್ಯಹರಿಶ್ಚಂದ್ರನಾಗಿ, ಶೂರಪದ್ಮಾಸುರನಾಗಿ ಪಾತ್ರಗಳು ಹೊರಹೊಮ್ಮಿಸಬೇಕು. ಅರ್ಕುಳ ಸುಬ್ರಾಯಾಚಾರಿ, ನಾರಾಯಣ ಕಿಲ್ಲೆ, ಕವಿಭೂಷಣ ವೆಂಕಪ್ಪ, ಪೊಳಲಿ ಬಾಲಕೃಷ್ಣ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ಕಿರೀಕ್ಕಾಡ್ ವಿಷ್ಣು ಮಾಸ್ತರ್, ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ಅಡ್ವೆ ವಾಸು ಶೆಟ್ಟಿ, ಇವರೇ ಮೊದಲಾದವರು ತಾಳಮದ್ದಲೆಗೆ ರೂಪು ಕೊಟ್ಟ ಶ್ರೇಷ್ಠ ಕೀರ್ತಿಶೇಷ ಕಲಾವಿದರು.
ಕುಂಬ್ಳೆ ಸುಂದರ ರಾಯರು, ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬರ್ ಸಮೋ, ಪೆರ್ಲ ಕೃಷ್ಣ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ಸಾಮಾಗ, ಕೆ. ಗೋವಿಂದ ಭಟ್ , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಮೊದಲಾದವರು ಈ ತಲೆಮಾರಿನ ಪ್ರಸಿದ್ಧ ಅರ್ಥಧಾರಿಗಳು.
ಯಕ್ಷಗಾನದಲ್ಲಿ ಪೂರಕ ಮಾರಕ ಬದಲಾವಣೆಗಳಾಗಿವೆ. ಪೌರಾಣಿಕ ಕಥಾವಸ್ತುವೇ ಪ್ರಧಾನವಾಗಿದ್ದ ಯಕ್ಷಗಾನಕ್ಕೆ , ಸಾಮಾಜಿಕ, ಕಾಲ್ಪನಿಕ ಕಥಾವಸ್ತ್ತುಗಳು ಪ್ರವೇಶಿಸುತ್ತವೆ. ಯಕ್ಷಗಾನವನ್ನು ಹಿಂದಿ, ತುಳು, ಇಂಗ್ಲೀಷ್ ಭಾಷೆಗಳಲ್ಲಿ ಪ್ರದರ್ಶಿಸಿದ ಉದಾಹರಣೆಗಳಿವೆ. ರಾತ್ರಿ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ನಡೆಯುವ ಯಕ್ಷಗಾನ ನಾಲ್ಕು ಗಂಟೆಯ ಸೀಮಿತ ಅವಧಿಯಲ್ಲಿ ಪ್ರದರ್ಶಿಸಿದ ಉದಾಹರಣೆಗಳಿವೆ, ಮೇಳವಿದೆ. ಭಾಮಿನಿ, ಯಕ್ಷಗಾನ ಅವಧಾನಗಳು ಯಕ್ಷಗಾನ ಬೆಳೆದ ಪರಿಯ ಸಂಕೇತ. ಈಗ ಯಕ್ಷಗಾನ ಕರಾವಳಿಗಷ್ಟೇ ಸೀಮಿತವಾಗಿಲ್ಲ. ಅದು ದೇಶದ ಉದ್ದಗಲಕ್ಕೂ ಸಂಚರಿಸಿ ಸಾಗರೋಲ್ಲಂಘನೆ ಮಾಡಿ ಅಲ್ಲಿ ಭೇಷ್ ಎನಿಸಿಕೊಂಡಿದೆ.
ಕಲೆ ಬೆಳೆಸುವಲ್ಲಿ ತನ್ನ ಜೀವನದ ನೆಲೆಯನ್ನೇ ಕಳೆದುಕೊಂಡ ಹಲವಾರು ಕಲಾವಿದರು ಇದ್ದಾರೆ. ಅವರಿಗೆಲ್ಲ ನಾವು ಅಭಾರಿಗಳು. ಇವತ್ತು ಈ ಕಲೆಯನ್ನು ನಮ್ಮ ಮನೆಯಲ್ಲೇ ನೋಡುವಷ್ಟು ನಮ್ಮ ತಂತ್ರಜ್ಜ಼ಾನ ಬೆಳೆದಿದೆ. ಆದರೆ, ನಿಜವಾದ ಯಕ್ಷಗಾನದ ರುಚಿ ಸವಿಯ ಬೇಕಾದರೆ, ರಾತ್ರಿ ಪೂರ್ತಿ ಎಚ್ಚರವಿದ್ದು ನೋಡಿದಾಗ ಮಾತ್ರ ಸಾಧ್ಯ. ಸಿರಿಗನ್ನಡಂ ಗೆಲ್ಗೆ,ಯಕ್ಷಗಾನಂ ಬಾಳ್ಗೆ.All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=330447.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|